ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆ ರಾಜ್ಯಗಳಲ್ಲಿರುವ ಪಾಕ್ ಪ್ರಜೆಗಳನ್ನು ಪತ್ತೆ ಹಚ್ಚಿ ತಕ್ಷಣ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಖಡಕ್ ಸೂಚನೆ ನೀಡಿದ್ದಾರೆ. ಕೇಂದ್ರ ಸರಕಾರ ನೀಡಿರುವ ಈ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳಾದ ಜಿ ಪರಮೇಶ್ವರ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕ್ ಪ್ರಜೆಗಳನ್ನು ಅತೀ ಶೀಘ್ರದಲ್ಲೂ ಪತ್ತೆ ಹಚ್ಚಿ ಗಡಿಪಾರು ಮಾಡಲಾಗುವುದು. ಮತ್ತು ಅಡಗಿ ಕುಳಿತಿರುವ ಭಯೋತ್ಪಾದಕರಿದ್ದಲ್ಲಿ (ಸ್ಲೀಪರ್ ಸೆಲ್) ಅವರನ್ನು ಪತ್ತೆ ಹಚ್ಚಲು ಪೂರ್ಣ ಪ್ರಯತ್ನ ಪಡುತ್ತೇವೆ ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳಿಗೆ ವಿಷಯ ತಿಳಿಸುತ್ತೇವೆ.

2019 ರಲ್ಲಿ ಪುಲ್ವಾಮಾ ನಡೆದ ದಾಳಿಯಲ್ಲಿ ಸುಮಾರು ೪೦ ಸಿಆರ್ಪಿಫ್ ಯೋಧರ ಹತ್ಯೆಯ ನಂತರ ಪೆಹಲ್ಗಾಮ್ ದಾಳಿಯೇ ಅತ್ಯಂತ ಭೀಕರ ದಾಳಿಯಾಗಿದೆ. ಈ ಘಟನೆಯನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಹಳ ಸೂಕ್ಷ್ಮವಾಗಿ ಪರಿಗಣಿಸಿದ್ದು, ಅತೀ ಬೇಗನೆ ಈ ದಾಳಿಗೆ ಪ್ರತ್ಯುತ್ತರ ನೀಡುವ ಸೂಚನೆಯನ್ನು ನೀಡಿದ್ದಾರೆ. ಲಭ್ಯವಿರುವ ಮಾಹಿತಿ ಪ್ರಕಾರ ಭಾರತೀಯ ಸೇನೆ ಈಗಾಗಲೇ ಪಾಕ್ ಗಡಿ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಾರಂಭಿಸಿದ್ದಾರೆ. ಈಗಾಗಲೇ ಎರಡು ಪ್ರಮುಖ ಭಯೋತ್ಪಾದಕರ ನಾಯಕರನ್ನು ಹೊಡೆದುರುಳಿಸಲಾಗಿದೆ ಎಂದು ತಿಲಿಸಲಾಗಿದೆ.